ನೇಪಾಳ ಪ್ರವಾಹ: ಮೃತರು, ನಾಪತ್ತೆಯಾದವರ ಗುರುತಿಗೆ ಭಾರತೀಯ ವಿಧಿವಿಜ್ಞಾನ ತಂಡದಿಂದ DNA ವಿಶ್ಲೇಷಣೆ
ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಹಠಾತ್ ಪ್ರವಾಹದಿಂದ ಬಾಧಿತರಾದ ಜನರನ್ನು ಗುರುತಿಸಲು 19 ಸದಸ್ಯರ ಭಾರತೀಯ ವಿಧಿವಿಜ್ಞಾನ ತಂಡ, ತಜ್ಞರೊಂದಿಗೆ DNA ಮಾದರಿ ವಿಶ್ಲೇಷಿಸಲು ಪ್ರಾರಂಭಿಸಿದೆ.
ಪ್ರವಾಹ ಪೀಡಿತ ಪ್ರದೇಶಗಳಿಂದ ಸಂಗ್ರಹಿಸಲಾದ DNA ಮಾದರಿಗಳನ್ನು ಪರಿಶೀಲಿಸುತ್ತಿದ್ದು, ಪ್ರವಾಹದಲ್ಲಿ ಮೃತಪಟ್ಟವರು ಮತ್ತು ಕಾಣೆಯಾದವರ ಗುರುತುಗಳನ್ನು ಪತ್ತೆ ಮಾಡಲು ತಂಡ ಪ್ರಯತ್ನ ನಡೆಸಿದೆ.
ನೇಪಾಳ ಪೊಲೀಸ್ ಕೇಂದ್ರ ವಿಧಿವಿಜ್ಞಾನ ಪ್ರಾಯೋಗಾಲಯ ಮತ್ತು ಕಠ್ಮಂಡು ಕಣಿವೆಯ ಖುಮಾಲ್ತಾರ್ ಪ್ರದೇಶದಲ್ಲಿರುವ ರಾಷ್ಟ್ರೀಯ ವಿಧಿವಿಜ್ಞಾನ ಪ್ರಾಯೋಗಾಲಯದಲ್ಲಿ, ತಂಡ, ವಿಶ್ಲೇಷಣೆ ಪ್ರಾರಂಭಿಸಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ
ಕಳೆದವಾರ ಸಂಭವಿಸಿದ ಪ್ರವಾಹದ ನಂತರ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.
583 ವಿದೇಶಿಗರು ಸೇರಿ 4 ಸಾವಿರದ 606 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ವಿವಿಧ ಪ್ರದೇಶಗಳಲ್ಲಿರುವ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.
